ಅನಂತಾಚಾರ್ಯ
ಅನಂತಾಚಾರ್ಯ | ಹುಟ್ಟಿದ ದಿನಾಂಕ: ೧೯೧೨ | ಮರಣ ದಿನಾಂಕ: ೧೬- ೧೦-೧೯೮೪ | |
ತಂದೆ: ರಾಮಾಚಾರ್ಯ | ತಾಯಿ: | ||
ಮಕ್ಕಳು: ಮಾಧವ | |||
ಒಡಹುಟ್ಟಿದವರು: ಬಾಳಾಚಾರ್ಯ (?), ರಂಗಾಚಾರ್ಯ, ಗೋವಿಂದ, ಭೀಮಾಬಾಯಿ (ಅಕ್ಕಣ್ಣಿ), ಕ್ರಿಷ್ಣಾಬಾಯಿ, ಪಾಂಡುರಂಗ, ಕೃಷ್ಣಾಜಿ, ಸುಭದ್ರಾ | Branch: 3 | Generation: 7 |
ವ್ಯಕ್ತಿ ಚಿತ್ರ
ದಿ. ಅನಂತಾಚಾರ್ಯ ರಾಮಾಚಾರ್ಯ ಮಂಗಳವೇಢೆ
ಮುರಗೋಡದಲ್ಲಿದ್ದ ರಂಗಾಚಾರ್ಯರ ಪ್ರಪೌತ್ರ, ಅನಂತಾಚಾರ್ಯರ ಪೌತ್ರ ಮತ್ತು ತಮ್ಮ ಜೀವಿತದ ಕೊನೆಯ ಭಾಗವನ್ನು ಬೆಳಗಾವಿಯಲ್ಲಿ ಕಳೆದ ರಾಮಾಚಾರ್ಯರ ಪುತ್ರ
ಕಿರು ಪರಿಚಯ
ದಿ. ಅನಂತಾಚಾರ್ಯ ರಾಮಾಚಾರ್ಯ ಮಂಗಳವೇಢೆ ಜನ್ಮ : ೧೯೧೨ ; ಮರಣ : ೧೬- ೧೦-೧೯೮೪ ರಂದು ಬಿಜಾಪುರದಲ್ಲಿ.
ಸೆಂಟ್ರಲ್ ಸಿ.ಐ.ಡಿ ಯಲ್ಲಿ ಇನಸ್ಪೆಕ್ಟರರಾಗಿ ಪೋಲಿಸ ಖಾತೆಯಲ್ಲಿ ಇದ್ದವರು
ಪತ್ನಿ : ದಿ. ಪದ್ಮಾವತಿ ( ತೌರುಮನೆಯ ಭಾಗೀರಥಿಎಂಬ ಹೆಸರಿನಲ್ಲೆ ಪರಿಚಿತರು. ಜನ್ಮ : ೨೦-೬- ೧೯೧೯ ರಂದು ಕಮತಗಿಯಲ್ಲಿ ; ಮರಣ : ಅಶ್ವೀನ ಶುದ್ಧ ಪ್ರತಿಪದಾ, ೧೯-೧೦-೧೯೬೩ (೧೯೬೨ ?) / ರಂದು ಬೆಳಗಾವಿಯಲ್ಲಿ.
ಮಕ್ಕಳು : ಮಾಧವ (ಏಕಮಾತ್ರ ಪುತ್ರ)
ವ್ಯಕ್ತಿ ಚಿತ್ರ
ಮುರಗೋಡದಲ್ಲಿದ್ದ ರಾಮಾಚಾರ್ಯರ ಒಂಬತ್ತು ಮಕ್ಕಳಲ್ಲಿ (೬ ಗಂಡು + ೩ ಹೆಣ್ಣು) – ೧. ಬಾಳಾಚಾರ್ಯ ೨. ರಂಗನಾಥ ೩. ಗೋವಿಂದ ೪. ಭೀಮಾಬಾಯಿ (ಅಕ್ಕಣ್ಣಿ) ೫. ಕೃಷ್ಣಾಬಾಯಿ (ಕೃಷ್ಟಕ್ಕ) ೬ ನೆಯವರೆ ಅನಂತ. ಇವರ ಬೆನ್ನ ಮೇಲೆ ೭. ಪಾಂಡುರಂಗ ೮. ಕೃಷ್ಣಾಜಿ ೯. ಸುಭದ್ರಾ (ಸುಬ್ಬಕ್ಕ). ಇವರಲ್ಲಿ ಹಿರಿಯ ಮಗ ಬಾಳಾಚಾರ್ಯ ಚಿಕ್ಕ ವಯಸ್ಸಿನಲ್ಲಿಯೆ – ಮುಂಜಿವೆಯಾದರೂ ಆಗಿತ್ತೋ ಇಲ್ಲವೊ / ಅಥವಾ ಮದುವೆಗೂ ಮುಂಚೆಯೆ, ಇನ್ನೂ ಬ್ರಹ್ಮಚಾರಿಯಾಗಿ ಇರುವಾಗಲೆ ತೀರಿಕೊಂಡಿದ್ದಿರಬಹುದು. ಹೀಗಾಗಿ ಆ ತಲೆಮಾರಿನವರ ಮಕ್ಕಳಾದ ನಮ್ಮ ಪೀಳಿಗೆಯವರಿಗೆ ತಮ್ಮ ತಂದೆ ಮತ್ತು ಕಕ್ಕಂದಿರ ಬಗ್ಗೆ ಇದ್ದ ತಿಳಿವಳಿಕೆ ಎಂದರೆ ಅವರಲ್ಲೆಲ್ಲ ಹಿರಿಯ ಅಣ್ಣ ಎಂದರೆ ರಂಗಣ್ಣ (ರಂಗನಾಥ) ಎಂದು. ರಾಮಾಚಾರ್ಯರ ಚೊಚ್ಚಿಲ ಮಗನ ಹೆಸರು ಕೇಳಿಯೂ ಗೊತ್ತಿರಲಿಲ್ಲ.
ಕ್ರಿ.ಶ.೧೮೭೫ರ ಆಸುಪಾಸಿನಲ್ಲಿ ಹುಟ್ಟಿ ೧೯೪೨ರಲ್ಲಿ ಮರಣಿಸಿದ ರಾಮಾಚಾರ್ಯರ ಉದರ ನಿರ್ವಹಣೆ ಶಿಕ್ಷಕ ವೃತ್ತಿಯಿಂದ ನಡೆದಿದ್ದಿತು. ಪ್ರಾಥಮಿಕ ಶಾಲೆಯ ಕೆಲಸ. ಅದರಿಂದ ಸಿಗುತ್ತಿದ್ದ ಪ್ರಾಪ್ತಿ ಕಡಿಮೆ ಎನಿಸಿದರೆ ಪರಂಪರೆಯಿಂದ ಗೊತ್ತಿದ್ದ ವೈದಿಕವೃತ್ತಿಯ ಬೆಂಬಲವೂ ಇದ್ದಿತು. ಹಾಗೆಯೆ, ಅವರು ತಮಗಿದ್ದ ಪೌರಾಣಿಕ ಕಥೆಗಳ ಜ್ಞಾನ, ಸಂಗೀತದ ರುಚಿ, ಸುಶ್ರಾವ್ಯ ಕಂಠ ಮತ್ತು ಸಿದ್ಧಿಸಿದ ನಿರೂಪಣಾ ಕಲೆಯಿಂದ ಒಬ್ಬ ಒಳ್ಳೆಯ ಕೀರ್ತನಕಾರನಾಗಿಯೂ ಸುತ್ತಲೂ ಹೆಸರು ಗಳಿಸಿದ್ದರು.
ಅವರ ಮಕ್ಕಳಲ್ಲಿ ಹಿರಿಯ ಮಗ ರಂಗನಾಥಅವರನ್ನು ಬಿಟ್ಟರೆ, ತಂದೆಯ ಶಿಕ್ಷಕವೃತ್ತಿಯನ್ನು ಉಳಿದವರಾರೂ ಮುಂದುವರೆಸಲಿಲ್ಲ. ಅದು ಹೇಗೋ, ಎರಡನೆಯ ಮಗ ಗೋವಿಂದ ಅವರಿಗೆ ಪೋಲೀಸು ಖಾತೆಯಲ್ಲಿ ಕೆಲಸ ಸಿಕ್ಕಿತು. ತಗೋ! ಅದೇನಿತ್ತೋ ಆ ಖಾಕಿ ದಿರಿಸಿನ ಆಕರ್ಷಣೆ, ಒಬ್ಬರ ನಂತರ ಒಬ್ಬರು – ಅನಂತಣ್ಣ, ಪಾಂಡಣ್ಣ, ಕೊನೆಯಲ್ಲಿ ಕಿಟ್ಟಣ್ಣ – ಪೋಲೀಸು ಖಾತೆಯ ಅಂಗಳದ ಸಮೀಪ ಹೋದಾಗ, ಅದರ ಗೇಟು ತೆರೆದುಕೊಂಡು ಎಲ್ಲರನ್ನೂ ಒಳಗೆ ಎಳೆದುಕೊಂಡು ಬಿಟ್ಟಿತು. ಆ ಖಾಕಿದರ್ಪಛತ್ರದಅಡಿಯಲ್ಲಿಯೆ ಸ್ಥಾನಾಪನ್ನರಾದರು.
ಆದರೆ ಈ ಎಲ್ಲ ಸಹೋದರರಲ್ಲಿ ಅನಂತ ಅವರದೊಂದು ಹೆಚ್ಚುಗಾರಿಕೆ. ಉಳಿದವರು ಯಾರೂ ಮಾಧ್ಯಮಿಕ ಶಾಲೆಯ ಗಡಿ ದಾಟಿದವರಲ್ಲ. ಇವರು ಕಾಲೇಜು ಕಟ್ಟೆ ಏರಿ, ತಮ್ಮ ಮನೆತನದಲ್ಲಿನ ಪ್ರಥಮ ಅಂಡರ ಗ್ರ್ಯಾಜ್ಯುಯೇಟ ಎನಿಸಿಕೊಂಡ ಹೆಗ್ಗಳಿಕೆ ಇವರದು. ಕಾಲೇಜಿಗೆ ಹೋದ ಮೇಲೆ ಪದವಿ ಏಕೆ ದಕ್ಕಲಿಲ್ಲ? ಆರ್ಥಿಕ ಅಡಚಣೆಯಿಂದಲೊ ಅಥವಾ ಕೆಲಸ ಹತ್ತಿತೆಂದೊ, ಇದು ನಂತರದ ಪೀಳಿಗೆಯ ನಮಗೆ ಕೇಳಿ ಗೊತ್ತಿಲ್ಲದ ವಿಷಯ.
ಇನ್ನು ದೈವದತ್ತವಾಗಿ ಬಂದಿದ್ದ ಕಥಾಕಥನ ಶಕ್ತಿ ಇವರ ಇನ್ನೊಂದು ಹೆಚ್ಚುಗಾರಿಕೆ. ಕಥೆ ಹೇಳತೊಡಗಿದರೆ ಹುಡುಗರು ಮುಕುರುವರು, ದೊಡ್ಡವರ ಕಿವಿಗಳೂ ಇವರತ್ತವೇ. ಗಿಡದಮೇಲಿನ ಮಂಗಗಳೂ ಕೈಬಿಡಬೇಕು, ಅಂತಹ ಆಕರ್ಷಕ ನಿರೂಪಣೆ. ಕಥೆಗಳೋ ಮಹಾಭಾರತದ ಪ್ರಸಂಗಗಳು.
ಕೃಷ್ಣನಂತಹ ದೈವೀ ಪುರುಷ, ಭೀಮಾರ್ಜುನಂತಹ ವೀರಾಧಿ ವೀರರು, ದುರ್ಯೋಧನ ದುಶ್ಶಾಸನರಂತಹ ಖಳರು ಇವರೆಲ್ಲ ಕಥಾ ನಾಯಕರಾಗಿರು ತ್ತಿದ್ದರು. ತಂದೆ ಬರಿಯ ವೈದಿಕ ಬ್ರಾಹ್ಮಣಮಾತ್ರನಲ್ಲ, ಕೀರ್ತನಕಾರರೂ ಆಗಿದ್ದರಲ್ಲವೆ! ಅಂದಮೇಲೆ ಆ ಪುರಾಣ ಕಥೆಗಳೆಲ್ಲ ಅವರಿಗೆ ಅಂಬೆಗಾಲಿಡು ವಾಗಲೆ ಕೇಳಿ ಕೇಳಿ ಮುಖೋದ್ಗತವಾದಂತಹವು. ಆದರೆ ತಂದೆಯ ಆ ಕೀರ್ತನೆಯ ನಿರೂಪಣೆಗೂ ಮಗನ ಕಥಾ ಕಥನ ಶೈಲಿಗೂ ಹುಣ್ಣಿಮೆ ಅಮಾವಾಸ್ಯೆಗೂ ಇರುವ ತದ್ವಿರುದ್ಧತೆ. ಅವರದೋ, ವೈದಿಕ ಬ್ರಾಹ್ಮಣ ವಾಣಿಯ ಇಂಚರ. ಇವರದೋ, ಒಳ್ಳೇ ತರಬೇತಿ ಪಡೆದ ಪೋಲೀಸರ ವಾಕ್ ವೈಭವ.
ಮಹಾಭಾರತವೇ ಅಣ್ಣತಮ್ಮಂದಿರ ಜಗಳದ ಕಥೆಯಲ್ಲವೆ. ವಾದವಿವಾದ, ಯುಕ್ತಿ ಕುಯುಕ್ತಿಗಳಿಲ್ಲದೆ ಜಗಳಗಳು ಸಾಧ್ಯವೆ? ಹುಡುಗರಿಗಂತೂ ಇಂತಹ ಕಥೆಗಳು ಕರಿದ ಕುರುಕಲು ತಿಂಡಿಗಳಂತೆ. ಭೀಮ ದುರ್ಯೋಧನರು ಜಗಳಾಡುತ್ತಿದ್ದಾಗ – ಹಾರುತ್ತಿದ್ದ ಮಾತಿನ ಕಿಡಿಗಳು, ಕೇಳುಗನ್ನು ಬಾಯಿ ತೆರೆದ, ಬಿಟ್ಟಗಣ್ಣಿನ ಸ್ಥಿತಿಯಲ್ಲಿಯೆ ನಿಶ್ಚಲಗೊಳಿಸಿ ಬಿಡುತ್ತಿದ್ದವು. ಆ ಜಗಳದ ಭಾಷೆ ಪುರಾಣದಲ್ಲಿ ಎಂದೂ ಯಾರ ಬಾಯಿಂದಲೂ ಕೇಳದ ಭಾಷೆ. ಒಮ್ಮೆ ಮುಸಲರ ಕೇರಿಯ ಅಸ್ಖಲಿತ ಮುಸಲ್ಮಾನಿ ಬೈಗಳು, ಮತ್ತೊಮ್ಮೆ ಪೊಲೀಸ ಠಾಣೆಯ ಶಬ್ದ ಭಂಡಾರವನ್ನೆ ಸೂರೆಗೈದು ಮಾಡಿದ ಆರೋಪ ಪ್ರತ್ಯಾರೋಪಗಳು.
ಕೃಷ್ಣನಂತಹ ದೈವೀ ಪುರುಷ ಸಿಟ್ಟಿನ ಭರದಲ್ಲಿ ಇಂಗ್ಲೀಶ ಬೈಗಳ ನೆರವನ್ನು ತೆಗೆದುಕೊಂಡು ಎದುರಾಳಿಯನ್ನು ಶಟ್ ಅಪ್ ಮಾಡುವ ಭಾಷಾ ವರ್ಚಸ್ಸು, ಮಗದೊಮ್ಮೆ ಈ ಪುರಾಣ ಪಾತ್ರಗಳ ಬಾಯಲ್ಲಿ ಅಚ್ಚ ಕನ್ನಡ ವೈದಿಕ ಬ್ರಾಹ್ಮಣರ ಬಾಯಲ್ಲಿ ಬರುವ, ಇಲ್ಲಿ ಬರೆಯಲೂ ಆಗದ, ಅವಾಚ್ಯ ಬೈಗಳು ಸಿಡಿದ ಪಟಾಕಿ ಯ ಕಿಡಿಯಂತೆ ವೈರಿ ಬಣಗಳ ಬಾಯಿಂದ ತೂರಿಬರುತ್ತಿದ್ದವು. ಹಾSS ! ಕೃಷ್ಣ ಹೀಗೆ ಇಂಗ್ಲಿಶ ಮತ್ತು ಮುಸಲ್ಮಾನಿಯಲ್ಲಿ ಬಯ್ಯಬಲ್ಲವನಾಗಿದ್ದನೆ ! ಭೀಮನಿಗೆ ಟಾಂಗಾವಾಲಾ ಭಾಷೆಯಮೇಲೆ, ಬೈಗಳ ಮೇಲೆ ಇಂತಹ ಮಾಸ್ಟರಿ ಇದ್ದಿತೇ ! ಅರ್ಜುನ ಕನ್ನಡದ ಅವಾಚ್ಯಶಬ್ದಗಳ ಪ್ರಯೋಗದಲ್ಲಿ ಇಷ್ಟೊಂದು ಪಾಂಡಿತ್ಯ ಹೊಂದಿದ್ದನೆ ! ಎಂದೆಲ್ಲ ಕೌತುಕದಿಂದ ಕೇಳುಗ ಅವಾಕ್ ಗೊಳ್ಳುತ್ತಿದ್ದ. ಕಣ್ಣೆದುರೇ ಕಥೆ ತಾಜಾತಾಜಾ ಆಗಿ ನಡೆಯುತ್ತಿದೆಯೇನೋ ಎನ್ನುವಂತಹ ಚಿತ್ರವತ್ ವರ್ಣನಾ ಶೈಲಿ. ಜೊತೆಗೇ, ಕತೆಗಾರನಿಗೆ ಇರಬೇಕಾದ ಕಲ್ಪಕಶಕ್ತಿಯಿಂದ ಕಥೆ ಇನ್ನೂ ರೋಚಕಗೊಳ್ಳುತ್ತಿತ್ತು. ಕೋಪೋದ್ರಿಕ್ತ ಸಾಮಾನ್ಯ ಮನುಷ್ಯನ ಜಗಳದ ಆಡು ಮಾತು ಪಾತ್ರಗಳನ್ನು ಹೊಸತೊಂದು ರೂಪದಲ್ಲಿ ಕಣ್ಣೆದುರು ನಿಲ್ಲಿಸುತ್ತಿದ್ದವು.
ಇನ್ನು, ಕಾಣಲು – ಅಷ್ಟೊಂದೇನೂ – ಅದೇಕೆ, ಸ್ವಲ್ಪವೂ ಅಡ್ಡವೊಡೆಯದಿದ್ದ, ಎತ್ತರದ ವ್ಯಕ್ತಿ, ಮಧ್ಯ ವಯಸ್ಸು ದಾಟಿದ ಮೇಲೂ ಹೊಟ್ಟೆಯ ಸುತ್ತಳತೆ ಇನ್ನೂ ಬೆಳೆದಿರಲಿಲ್ಲ, ತೀಡಿ ಕ್ರಾಪು ಹಿಕ್ಕಿಕೊಂಡಿದ್ದ ತಲೆ. ಆಗೀಗ ನೆಕ್ ಟಾಯಿ ಕಟ್ಟಿ, ಕೋಟು- ಪ್ಯಾಂಟು ಧರಿಸುತ್ತಲೂ ಇದ್ದರು. ಮೇಲೆ ಪೋಲಿಸ ಅಧಿಕಾರಿಯ ಛಾಪು ಬೇರೆ. ಹೀಗೆ ಉಳಿದ ಸಹೋದರರಿಗಿಂತಲೂ ಬೇರೆಯಾಗಿ, ಆಧುನಿಕರಾಗಿ, ಆಕರ್ಷಕರಾಗಿ ಕಾಣುತ್ತಿದ್ದರು. ಹಲ್ಲುಗಳನ್ನು ತೆಗೆಸಿಕೊಂಡು ಕೃತಕ ದಂತಪಂಕ್ತಿ ಧರಿಸುತ್ತಿದ್ದರೂ, ಅವರ ರೂಪಕ್ಕೆ ಇದರಿಂದ ಧಕ್ಕೆಯೇನೂ ಆಗಿರಲಿಲ್ಲ.
——–ವ್ಯಕ್ತಿ ಚಿತ್ರದ ಈ ಭಾಗದ ಲೇಖಕ – ಅನಂತಾಚಾರ್ಯರ ಹಿರಿಯ ಆಣ್ಣನ ಮಗ ಶ್ರೀಕಾಂತ ರಂಗನಾಥ ಮಂಗಳವೇಢೆ.—— ಮುಂದಿನ ಭಾಗದ ಮಾಹಿತಿ ಅನಂತಾಚಾರ್ಯರ ಪುತ್ರ ಮಾಧವ ಅವರು ನೀಡಿದ್ದು.
ಚಿಕ್ಕಂದಿನಿಂದಲೆ ಚೂಟಿ, ಚುರುಕು, ತೀಕ್ಷ್ಣಮತಿ. ವಾಕ್ಪಟು. ತಂದೆ- ತಾಯಿಗೆ ಬೆಂಗಾವಲಾಗಿ, ಅಂಗರಕ್ಷಕನಂತೆಇದ್ದ ಪುತ್ರ. ಒಮ್ಮೆ ರಾಮಾಚಾರ್ಯರು ದೇವರ ಪೂಜೆಗೆಂದು ಮಡಿಯಿಂದ ನೀರು ತರುತ್ತಿದ್ದರು. ದಾರಿಯಲ್ಲಿ ಕುಚೇಷ್ಟೆಯ ಯಾವನೊ ಒಬ್ಬ ದನ ತೊಳೆಯುವ ನೆಪದಲ್ಲಿ ನೀರು ಸಿಡಿಸಿದ, ಹದಿ ವಯದ ಅನಂತಾಚಾರ್ಯರಿಗೆ ತಡೆಯಲಾರದಷ್ಟು ಸಿಟ್ಟು ಬಂದಿತು. ಓಡಿಹೋಗಿ ಡೊಣ್ಣೆ ಹಿಡಿದುಕೊಂಡು ಬಂದು ಆ ಕುಚೋದ್ಯವೆಸಗಿದವನ ಕಾಲಿಗೆ ಇಕ್ಕರಿಸಿ ಪಾಠ ಕಲಿಸಿದ್ದರು.
ಪ್ರಾಥಮಿಕ ಶಿಕ್ಷಣ ಮುರಗೋಡದಲ್ಲಿ, ಮಾಧ್ಯಮಿಕ ಶಾಲೆ ಬೆಳಗಾವಿಯಲ್ಲಿ, ನಂತರ ಉಚ್ಚ ಶಿಕ್ಷಣಕ್ಕಾಗಿ ಹೋಗಿದ್ದು ಕೊಲ್ಹಾಪುರದಕ್ಕೆ, ರಾಜಾರಾಮ ಕಾಲೇಜದಲ್ಲಿ ಅಲಿಯಲು. ಕಲಿಕೆ ಒಂದು ಹಂತಕ್ಕೆ ಬರುತ್ತಿರುವಂತೆಯೆ ಸುಭದ್ರಾ ಎಂಬುವರೊಡನೆ ಮದುವೆಯೂ ಆಯಿತು. ಅದರೆ ಅತ್ಯಲ್ಪಕಾಲದ ದಾಂಪತ್ಯವಾಯಿತು. ಆರೆಂಟು ತಿಂಗಳಲ್ಲಿಯೆ ಅವಳು ಕಣ್ಣುಮುಚ್ಚಿದಳು. ಆಗ, ಕೆಲದಿನ ಬೆಳಗಾವಿಯ ರಾಮಖಿಂಡ ಗಲ್ಲಿಯಲ್ಲಿನ ಮನೆಯಲ್ಲಿ ಇದ್ದಾಗ ಪೋಲಿಸ ಇಲಾಖೆಯಲ್ಲಿ ಕೆಲಸ ಸಿಕ್ಕದ್ದು. ಹವಾಲ್ದಾರನಾಗಿ ವೃತ್ತಿ ಜೀವನದ ಆರಂಭ. ಮುಂದೆ ಸರ್ವೀಸಿನಲ್ಲಿ ಕಾಲಕಾಲಕ್ಕೆ ಬಢತಿ ಸಿಗುತ್ತ ಸಬ್-ಇನ್ಸಪೆಕ್ಟರ (ಪಿ.ಎಸ್.ಆಯ್) ನಂತರ ಸೆಂಟ್ರಲ ಸಿ.ಆಯ.ಡಿ ಇನ್ಸಪೆಕ್ಟರ (ಎಸ್. ಆಯ್) ಹುದ್ದೆಗೆ ಏರಿದ್ದು.
ವಿವಾಹ : ಮೊದಲ ಹೆಂಡತಿ ಸುಭದ್ರಾ ಮದುವೆಯಾಗಿ ವರ್ಷವಾಗುವ ಮೊದಲೆ ತೀರಿ ಹೋಗಿದ್ದಳಷ್ಟೆ. ಮತ್ತೆ ಹೊಸ ಸಂಬಂಧ ಕುದುರಿತು. ಕಮತಗಿಯ ದೇಶಪಾಂಡೆ ಮನೆತನದ, ಆರೆಂಟು ಜನ ಅಣ್ಣ ತಮ್ಮಂದಿರ ನಡುವೆ ಏಕಮಾತ್ರ ಕುವರಿಯಾಗಿ ಬೆಳೆದ ಭಾಗೀರಥಿಯ ( ಜನ್ಮ: ೨೦ ಜೂನ ೧೯೧೯) ಕೈ ಹಿಡಿದರು. ಮದುವೆ ನಡೆದುದು ೧೯೩೮ರ ವೈಶಾಖದಲ್ಲಿ. ಗಂಡನ ಮನೆಯಲ್ಲಿ ಪದ್ಮಾಬಾಯಿ ಎಂದು ಹೆಸರಿಟ್ಟರೂ ಅದು ಕಾಗಪತ್ರದಲ್ಲಿನ ಬಳಕೆಗೆ ಮಾತ್ರವಾಗಿ, ಆ ಮನೆಯ ಪದ್ಧತಿಯಂತೆ ಕರೆಯಲು ತೌರುಮನೆಯ ಹೆಸರು ಭಾಗೀರಥಿ ಎಂಬುದೆ ಉಳಿದುಹೋಯಿತು.
ಮತ್ತೊಂದು ಮದುವೆ ನಡೆದು, ಸಂಸಾರ ನೌಕೆ ಮತ್ತೆ ಮುಂದೆ ಮುಂದೆ ಸಾಗತೊಡಗಿದರೂ, ಎಲ್ಲ ಇದ್ದೂ ಏನೂ ಇರದ ಅನುಭವ ಮಾತ್ರ ಸ್ಥಾಯೀಭಾವವಾಗಿ ಇವರನ್ನು ಜೀವನದ ಉದ್ದಕ್ಕೂ ಕಾಡುತ್ತಲೆ ಹೋಯಿತು.
ಮುಂದೆ ಎರಡು ದಶಕಗಳೆ ಕಳೆದರೂ ಮನೆ ಮಕ್ಕಳ ಕಿಲಕಿಲ ನಗು, ಆಟಪಾಠಗಳನ್ನು ಕಾಣಲಿಲ್ಲ. ಮನೆ – ಮನ ಎರಡೂ ಬರಿದಾಗೆ ಉಳಿದವು. ಹೆಂಡತಿಗೆ ಮಕ್ಕಳಾಗುವ ವಯಸ್ಸೂ ಹೆಚ್ಚೂ ಕಡಿಮೆ ಮುಗಿಯಿತ್ತ ಬಂದಿತು. ಆರೋಗ್ಯವೂ ಹದಗೆಟ್ಟಿದ್ದಿತು. ಈ ನೋವು ದೇವರಿಗೂ ಗೊತ್ತಾಯಿತೇನೋ ! ಎಲ್ಲ ಆಸೆ ಕಮರಿಹೋಗಿದ್ದಾಗ, ಆಶ್ಚರ್ಯವೆನಿಸುವಂತೆ ಬಯಕೆಯ ಚಿಹ್ನೆಗಳು ಕಾಣಿಸಿಕೊಂಡವು. ಮುಂದೆ ಮಗುವೂ ಹುಟ್ಟಿತು – ಅದೂ ಗಟ್ಟಿ ಮುಟ್ಟಾದ ಗಂಡು ಮಗು.
ಆದರೂ ಲಲಾಟ ಲಿಖಿತವಾಗಿದ್ದ, ಎಲ್ಲ ಇದ್ದೂ ಏನೂ ಇರದ ಆ ಸ್ಥಾಯೀಭಾವದ ಪ್ರಭಾವ, ಪ್ರಕಟವಾಗಿಯೆ ಇದ್ದಿತು. ತನ್ನ ನಲವತ್ತೆರಡನೆ ವಯಸ್ಸಿಗೇ ಏಕಾಗಲಿ – ಮದುವೆಯಾಗಿ ಇಪ್ಪತ್ತೆರಡು ವಷಗಳ ಸುದೀರ್ಘಾವಧಿ ಖಾಲಿ ಖಾಲಿಯಾಗಲೆ ಗತಿಸಿದ ನಂತರವೇ ಏಕಾಗಲಿ- ಕೊನೆಗೂ ಮಗುವನ್ನು ಪಡೆದ ಆ ಧನ್ಯತೆ, ಸಂತೋಷಗಳನ್ನೂ ಪೂರ್ಣವಾಗಿ ಅನುಭವಿಸುವದು ಆ ತಾಯಿಯ ಹಣೆಬರಹದಲ್ಲಿ ಇರಲಿಲ್ಲ. ತನ್ನ ಹಾಲನ್ನೂ ಕುಡಿಸುವ, ಎತ್ತಿಕೊಂಡು ಆಡಿಸುವ ಭಾಗ್ಯ ಅವಳಿಗಿರಲಿಲ್ಲ. ಆ ಮಗು, ಅದೇ ಹೊತ್ತಿಗೇ ಹಡೆದಿದ್ದ ತನ್ನ ಕಾಕೂ – ಮೈನಕ್ಕನ ಹಾಲು ಕುಡಿದು, ಉಳಿಯಿತು, ಬೆಳೆಯಿತು. ಆದರೆ ಅದನ್ನಾದರೂ ನೋಡುವ ಭಾಗ್ಯ ಆ ತಾಯಿಗಿರಲಿಲ್ಲ. ಮಗು – ಮಾಧವ ಎರಡು ವರ್ಷಗಳದಾಗಿತ್ತು, ವಿಧಿ ಬರ ಸಿಡಿಲಿನಂತೆ ಎರಗಿ, ತಾಯಿಯನ್ನೆ ಕರೆದೊಯ್ದಿತು.
ಅವಳು ಮರಣ ಹೊಂದಿದ್ದು ೧೯-೧೦-೧೯೬೩ ರ ಅಶ್ವೀನ ಶುದ್ಧ ಪ್ರತಿಪದಾ. ಅದರೂ ಅವಳ ಜೀವಿತದ ಒಂದು ಸಾರ್ಥಕತೆಯ ಕುರುಹು ಮಾಧವನೆಂಬ ಏಕಮಾತ್ರ ಪುತ್ರನ ರೂಪದಲ್ಲಿ ಇಂದಿಗೂ ಉಳಿದು, ತನ್ನ ತಂದೆ – ತಾಯಿಯ ವ್ಯಕ್ತಿ ಪರಿಚಯದ ಈ ವಿವರಣೆಗಳನ್ನು ಕೊಡುತ್ತಿದೆ.
ತಾಯಿ ಇಲ್ಲದ ಸಣ್ಣ ಕೂಸು ಮಾಧವನಿಗೆ ತಂದೆಯೆ ತಾಯಿಯ ಪಾತ್ರವನ್ನೂ ವಹಿಸಿ, ಮುಂದಿನ ಇಪ್ಪತ್ತು- ಇಪ್ಪತ್ತೆರಡು ವರ್ಷ ಆರೈಕೆ ಮಾಡಿದರು. ಬೆಳೆಸಿ, ಕಲಿಸಿ, ದೊಡ್ಡವನನ್ನಾಗಿ ಮಾಡಿದರು, ಕೆಲಸ ಹತ್ತಿಯಾದ ಎರಡು ವ₹ರ್ಷಗಳಾಗುತ್ತಲೆ ೧೯೮೩ ರಲ್ಲಿ ಮದುವೆಯನ್ನೂ ಮಾಡಿದರು.
ಇರಲಿ. ಅನಂತ – ಪದ್ಮಾ ಅವರ ದಾಂಪತ್ಯದ ಇನ್ನೂ ಒಂದೆರಡು ವಿಶೇಷಗಳನ್ನು ಹೇಳಬೇಕಿದೆ. ಅವು ಬಾಲ್ಯದಲ್ಲಿ ಕೇಳಿತಿಳಿದ ಸಂಗತಿಗಳು. ತಾಯಿಯ ತೌರುಮನೆ ಕಡೆಯವರು – ಅಂದರೆ ಅಜ್ಜ ಅಜ್ಜಿ, ಸೋದರ ಮಾವಂದಿರು, ಮಾವಶಿಯರು ಇವರ ಬಗ್ಗೆ ಈಗ ನೆನಪಿಸಿಕೊಂಡು ಹೇಳಬೇಕೆಂದರೆ, ತಾಯಿಯನ್ನು ನೋಡಿದ್ದ ನೆನಪೇ ಇಲ್ಲದಿರುವಾಗ ಉಳಿದವರ ಬಗ್ಗೆ ಹೇಳಲೇನಿದೆ. ಮಗ ಮಾಧವನಿಗೆ ತಿಳಿವಳಿಕೆ ಬಂದಮೇಲೆ ಅನಿಸಿದ್ದು – ಆಗಿನ ಸಮಾಜದಲ್ಲಿದ್ದ ಗಂಡಸಿನ ಅತಿಶಯ ಅಹಮ್ಮು – Ego. ಅಂದಿನ ಸಮಾಜದಲ್ಲಿ ಹುಟ್ಟಿದ ಮಾತು, ಕೊಟ್ಟ ಹೆಣ್ಣು ಕುಲಕ್ಕೆ ಹೊರತು”. ಹೀಗೆ ಇದ್ದ ಆಚರಣೆಯಿಂದಾಗಿ, ಅವಳಿದ್ದಾಗಲೆ ತಾಯಿಯ ತೌರು ಮನೆಯ ಸಂಪರ್ಕ ಕ್ಷೀಣವಾಗಿ ಹೋಗಿತ್ತು. ನಂತರ ಅದು ಹೆಚ್ಚೂಕಡಿಮೆ ಶೂನ್ಯವಾಗಿ, ಪೂರ್ತಿ ಕಡಿದೇ ಹೋಯಿತು. ಈಗ ಮಗನಿಗೇ ಮಾತ್ರ ಗೊತ್ತಿರುವ ಒಂದೇ ಸಂಗತಿ – ತನ್ನ ತಾಯಿ ಕಮತಗಿ ದೇಶಪಾಂಡೆ ಎನ್ನುವವರ ಮಗಳು. ಅವಳಿಗೆ ಸಹೋದರರೂ ಇದ್ದರು. ಆದರೆ ಅವರ ಬಗ್ಗೆ ಏನೂ ಗೊತ್ತಿಲ್ಲ.
ಆದರೂ, ತಾಯಿಯ ಬಗ್ಗೆ ತಂದೆಯಿಂದ ಕೇಳಿ ತಿಳಿದ, ಈಗಲೂ ನೆನಪಿರುವ ವಿಷಯ, ಅವಳಿಗೆ ಸಿನಿಮಾ ನೋಡುವ ಗೀಳು ಬಹಳೆ ಇತ್ತು. ಓಣಿಯ ಗುರುತಿನ ಹೆಂಗಸರನ್ನು ಕರೆದುಕೊಂಡು ಸಿನಿಮಾ ನೋಡಲು ಹೋಗುವದು ರೂಢಿಯಲ್ಲಿತ್ತು.
ವೈವಾಹಿಕ ಜೀವನ ಈ ರೀತಿಯದಾದರೆ, ವೃತ್ತಿ ಜೀವನವೂ ಹೊರತಾಗಿರಲಿಲ್ಲ. ಎಲ್ಲರಂತೆ ನಿವೃತ್ತಿ ವಯಸ್ಸು(Retirement Age) ಮುಟ್ಟಿ Superannuated ಆಗುವ ಯೋಗವೂ ಇವರದಾಗಿರಲಿಲ್ಲ. ಆ ನೋವಿನ ಘಟನೆಯ ನಿರೂಪಣೆ ಇಲ್ಲಿ ಬೇಡ. ಸರ್ವೀಸು ಮುಗಿಯುವ ಮೊದಲೆ ನಿವೃತ್ತರಾಗಿ ಉದರಂಭಣೆಗಾಗಿ ಯೋಗ್ಯರೀತಿಯಲ್ಲಿ ಕಾಲಹರಣವಾಗಲೆಂದು ಆಸ್ಸಾಮ ಚಹಾಪುಡಿ – ಸಕ್ಕರೆ ಮಾರುವ ಅಂಗಡಿಯೊಂದನ್ನು ತೆಗೆಯುವ ಪ್ರಯೋಗವೂ ಆಯಿತು. ೧೯೬೦ ರ ಪ್ರಾರಂಭದ ವ₹ರ್ಷಗಳಲ್ಲಿ, ಬೆಳಗಾವಿಯ ಭಾಗವಾಗಿದ್ದ ಶಹಾಪುರದಲ್ಲಿ ತಾವು ಇರುತ್ತಿದ್ದ ಬಾಡಿಗೆ ಮನೆಯ ಹೊರ ಕೋಣೆಯನ್ನೆ ಅಂಗಡಿಯಾಗಿ ಪರಿವರ್ತಿಸಿದರು.
ಮಗ ಇನ್ನೂ ಹುಟ್ಟಿರಲಿಲ್ಲ. ಕಮೀಷನ್ ಏಜೆಂಟ ಆಗಿ ಹೊಸ ಬದುಕು. ಜೊತೆಗೆ ಹೊಮಿಯೊಪತಿ ಮತ್ತು ಆಯುರ್ವೇದ ಔಷಧೀ ಶಾಸ್ತ್ರಗಳ ಅಧ್ಯಯನವೂ ಶುರುವಾದುದು. ಗುರುತಿನವರಿಗೆ ವೈದ್ಯರೂ ಆದರು. ತಮ್ಮ ಮೇಲೆಯೆ ಔಷಧೀ ಜ್ಞಾನದ ಪ್ರಯೋಗವನ್ನು ಮಾಡಿಕೊಂಡ ಫಲವೋ, ಅಥವಾ ತಡವಾಗಿಯೆ ಸಂತಾನ ಭಾಗ್ಯವಿದ್ದಿತೊ, ಅಂತೂ ಪುತ್ರ ಮಾಧವನ ಜನ್ಮ ಬದುಕಿನ ಈ ಹೊಸ ಪರ್ವದಲ್ಲಿ ೧೯೬೧ ರಲ್ಲಿ ಆಯಿತು.
ಮುಂದೆ ಬೆಳಗಾವಿಯ ಮತ್ತೊಂದು ಭಾಗ ಅನಗೋಳದಲ್ಲಿ ಮನೆಯೊಂದರ ಖರೀದಿ. ಸ್ವಂತ ಮನೆಗೆ ಸ್ಥಳಾಂತರ. ನಿಧಾನ ಗತಿಯ ಜೀವನ. ಫಿಲಿಪ್ಸ್ ಸೈಕಲ್ ಮೇಲೆ ಕೂರಿಸಿಕೊಂಡು ಮಗನನ್ನು ಶಾಲೆಗೂ, ಸಂತೆಗೂ, ಟಿಳಕವಾಡಿಯ ಆನೆ-ಹುಲಿ ಗಾರ್ಡನ್ನಿಗೂ, ಸಂಜೆ ಹೊತ್ತು ಮಿಲಿಟರಿ ಮಹಾದೇವ್ ಮತ್ತು ಸಾಯಿ ಬಾಬಾನ ಗುಡಿಗೂ, ಲೈಬ್ರರಿಗೂ – ಎಲ್ಲೆಂದರಲ್ಲಿ ಸವಾರಿ.
೧೯೭೧ರಲ್ಲಿ ರಕ್ತ ತುಂಬಿದ ಕುರುಗಳ ಬಾಧೆಯ ನಿವಾರಣೆಗಾಗಿ ಕ್ಯಾಂಪ ಭಾಗದಲ್ಲಿದ್ದ ಮೆಟಗುಡ್ಡ ಹಾಸ್ಪಿಟಲಿನಲ್ಲಿ ಆಪರೇಶನ್ ಆದುದು.
ಕಾರಣಾಂತರಗಳಿಂದ ೧೯೭೩ರಲ್ಲಿ ಅನಗೋಳದ ಸ್ವಂತ ಮನೆ ಮಾರಬೇಕಾಯಿತು. ನಂತರ ಅನಗೋಳ, ವಡಗಾಂವ, ಭಾಂದುರ ಗಲ್ಲಿ ಕೊನೆಗೆ ಹಿಂದವಾಡಿ ಹೀಗೆ ಮನೆಗಳನ್ನು ಬದಲಾಯಿಸಿ ಇದ್ದುದು.
ಕೆಲ ವರ್ಷಗಳ ನಂತರ ೧೯೮೧ ರಲ್ಲಿ ಮಗನಿಗೆ ಲೋಕೋಪಯೋಗಿ ಇಲಾಖೆಯಲ್ಲಿ ನೌಕರಿ ಸಿಕ್ಕ ಪ್ರಯುಕ್ತ ಮಗನೊಡನೆ ಬಿಜಾಪುರಕ್ಕೆ ಹೋಗಿ ಇರಬೇಕಾಯಿತು.
ಅಂತೂ, ಕಷ್ಟದ ಸುದೀರ್ಘ ಅವಧಿ ಕಡೆಗೂ ಒಮ್ಮೆ ಮುಗಿಯಿತು. ತನ್ನ ಒಬ್ಬನೇ ವಾರಸುದಾರ – ಕರುಳಿನ ಕುಡಿ ಚಿ. ಮಾಧವನ ಮದುವೆ ೧೯೮೩ ರಲ್ಲಿ ಮಾಡಿ ಮನೆಗೆ ಸೊಸೆಯನ್ನು ತಂದುಕೊಂಡುದು. ವರ್ಷಾನುಗಟ್ಟಲೆ ಹೆಣ್ಣಿನ ಅಭಾವ ಇದ್ದ ಕುಟುಂಬದಲ್ಲಿ ಗೃಹಲಕ್ಷ್ಮ್ಜಿಯಾಗಿ ಸೊಸೆ ಸಂಧ್ಯಾಳ ಶುಭಾಗಮನ. ಮರುವರ್ಷ ಮೊಮ್ಮಗಳು ಪದ್ಮಜಾ ಹುಟ್ಟಿದ್ದನ್ನೂ ನೋಡಿಯೆ, ಈ ನಿವೃತ್ತ ಪೋಲಿಸ ಅಧಿಕಾರಿ ೧೬ -೧೦-೧೯೮೪ ರಂದು ಬಿಜಾಪುರದಲ್ಲಿ ವೈಕುಂಠವಾಸಿಯಾದರು.